ನೂರಾರು ವರ್ಷಗಳ ಇತಿಹಾಸ ಹೊಂದಿರುವ ಧಾರ್ಮಿಕ ಕ್ಷೇತ್ರವಿದು, ಯಾರೊ ಮಂಜುನಾಥ ಸ್ವಾಮಿಯ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡಿದ ತಕ್ಷಣ ಪರಶಿವನ ಮೇಲೆ ಜನರಿಗೇನು ನಂಬಿಕೆ ಕಡಿಮೆ ಆಗೋದಿಲ್ಲ, ಮತ್ತೆ ಯಾರೊ ದೊಡ್ದಾಗಿ ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಮಂಜುನಾಥ ಸ್ವಾಮಿಯ ದರ್ಶನ ಮಾಡೋದಿಲ್ಲ ಅಂತ ಹೇಳಿದ್ ತಕ್ಷಣ ಅದನ್ನ ಶೇರ್ ಮಾಡಿ ನಾವು ಕೂಡ ದರ್ಶನ ಮಾಡೋದಿಲ್ಲ ಅಂತ ಕೆಲವರು ಬಿಲ್ಡಪ್ ಕೊಟ್ಟಾಗ ಧರ್ಮಸ್ಥಳಕ್ಕೆ ಹೋಗುವವರ ಸಂಖ್ಯೆ ಏನ್ ಕಡಿಮೆ ಆಗೋದಿಲ್ಲ… ಹಾಗಾದರೆ ಆ ಹುಡ್ಗಿಗೆ ಅನ್ಯಾಯ ಆಗಿದ್ರು ಕಣ್ಮುಚ್ಚಿಕೊಂಡು ಕೂರಬೇಕೆ?
ಕೂತ್ಕಳ್ಳಿ ಅಂತ ಯಾರ್ ಹೇಳಿದ್ದು? ಮೊದಲನೆಯದಾಗಿ ಸೌಜನ್ಯ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ, ಸರ್ಕಾರ ಇನ್ನೂ ಹೆಚ್ಚಿನ ತನಿಖಾ ತಂಡಗಳನ್ನ ನೇಮಿಸಿ ತಪ್ಪಿತಸ್ಥರನ್ನ ಪತ್ತೆ ಹಚ್ಚಿ ಶಿಕ್ಷಿಸುವ ಕೆಲಸ ಮಾಡ್ಲಿ, ಇನ್ನು ಧರ್ಮಾಧಿಕಾರಿಗಳೇ ಈ ವಿಚಾರದಲ್ಲಿ ತಪ್ಪು ಮಾಡಿದವರ ಪರ ನಿಂತು ಅಧರ್ಮದ ಕೆಲಸ ಮಾಡ್ತಿದ್ದಾರೆ ಅನ್ನೋದೆ ನಿಜವಾಗಿ ಅದು ಕೂಡ ಸಾಬೀತಾದರೆ ಕಾನೂನಿನ ಪ್ರಕಾರ ಅವರಿಗೂ ಶಿಕ್ಷೆ ಆಗ್ಬೇಕು, ಅದನ್ನೆಲ್ಲ ಬಿಟ್ಟು ಧರ್ಮಸ್ಥಳದಲ್ಲಿ ಮಂಜುನಾಥ ಇದಾನ, ಇದ್ದಿದ್ರೆ ಸೌಜನ್ಯಳಿಗೆ ಈ ರೀತಿ ಆಗ್ತಾ ಇತ್ತಾ, ನ್ಯಾಯ ಸಿಗುವವರೆಗೂ ದರ್ಶನ ಮಾಡೋದಿಲ್ಲ ಅನ್ನೋದು ತೀರಾ ಬಾಲಿಶ ಹೇಳಿಕೆ ಅನ್ಸುತ್ತೆ, ದೇವರು ಭೌತಿಕವಾಗಿ ಇದ್ದಿದ್ರೆ ಅವತ್ತು ಸೌಜನ್ಯಳ ಮೇಲೆ ಆ ರೀತಿಯ ಮೃಗೀಯ ದಾಳಿಯನ್ನೇ ತಪ್ಪುಸ್ತಿದ್ದ…
ದೇವರು ಅನ್ನೋದು ಒಂದು ರೀತಿಯ ಭಾವ, ನಂಬುವವರು ನಂಬಿಕೆ ಮೇಲೆ ಬದುಕ್ತಾರೆ, ನಂಬದೇ ಇರುವವರು ಕೆಲವೊಂದು ತರ್ಕಗಳನ್ನ ಮುಂದೆ ಇಟ್ಟು ತಮ್ಮ ಪಾಡಿಗೆ ತಾವು ಬದುಕ್ತಾರೆ, ಆದ್ರೆ ಕ್ಲಾರಿಟಿನೇ ಇಲ್ಲದೆ ಬದುಕ್ತಿರೋರ್ ಮಾತ್ರ ದೇವರನ್ನ ಪ್ರಶ್ನೆ ಮಾಡ್ಕಂಡ್ ಬದುಕ್ತಾ ಇದಾರೆ, ಕೇದಾರನಾಥ ಅಮರನಾಥ ಯಾತ್ರೆ ಹೋದವರಲ್ಲಿ ಅನೇಕ ಜನ ಪ್ರಕೃತಿ ವಿಕೋಪಕ್ಕೆ ಬಲಿಯಾಗಿದ್ದಾರೆ, ತನ್ನ ದರ್ಶನಕ್ಕೆ ಅಷ್ಟು ಕಷ್ಟ ಪಟ್ಟು ಬರುವ ಭಕ್ತರನ್ನ ಕಾಯದ ದೇವರು ಯಾಕೆ ಅಂತ ಪ್ರಶ್ನೆ ಮಾಡೋಕೆ ಆಗುತ್ತಾ? ದೇವರು ಹೇಳಿದ್ನ ಬಂದು ದರ್ಶನ ಪಡೆದು ಹೋಗಿ ಅಂತ, ಹೋಗುವುದು ಅವರವರ ವೈಯಕ್ತಿಕ ವಿಚಾರ, ಧರ್ಮಸ್ಥಳದ ವಿಚಾರದಲ್ಲಿ ಇಷ್ಟೇ, ಮಂಜುನಾಥ ಸ್ವಾಮಿ ಯಾರಿಗೂ ದರ್ಶನ ಪಡೆದು ಹೋಗಿ ಅಂತ ಕೇಳ್ಕೊಂಡಿಲ್ಲ , ಇಷ್ಟ ಇರೋರ್ ಹೋಗ್ತಾರೆ ಅಷ್ಟೇ…
ಸರಿ ಧರ್ಮಸ್ಥಳದಲ್ಲಿ ಮಂಜುನಾಥ ಇರ್ಲಿಲ್ಲ ಅದ್ಕೆ ಸೌಜನ್ಯ ಮೇಲೆ ದಾಳಿ ಆಯ್ತು, ಮತ್ ಪಕ್ಕದ ಕುಕ್ಕೆಯಲ್ಲಿ ಸುಬ್ರಹ್ಮಣ್ಯ ಇರ್ಲಿಲ್ವ ಅಟ್ಲೀಸ್ಟ್ ಆ ದೇವರಾದ್ರು ಕಾಪಾಡಬಹುದಿತ್ತು ಅಲ್ವಾ, ಮತ್ ಈಗ ಧರ್ಮಸ್ಥಳಕ್ಕೆ ಹೋಗಲ್ಲ ಅಂದವರು ಕುಕ್ಕೆಗೂ ಹೋಗೋದಿಲ್ವ, ದೇವರೊಬ್ಬನೆ ನಾಮ ಹಲವು, ಇಷ್ಟೆಲ್ಲಾ ಪ್ರಶ್ನೆ ಮಾಡುವವರು ತಮ್ಮ ಮನೆಯಲ್ಲಿ ಇರುವ ದೇವರ ವಿಗ್ರಹಗಳನ್ನ, ಫೋಟೋಗಳನ್ನ ಮನೆಯಿಂದ ಆಚೆ ಹಾಕಿ ಸೌಜನ್ಯಳ ಸಾವಿಗೆ ನ್ಯಾಯ ಸಿಗುವವರೆಗೂ ಮನೆಯೊಳಗೆ ದೇವರಿಗೆ ಪ್ರವೇಶವಿಲ್ಲ ಅಂತ ಹೇಳುವ ಧೈರ್ಯ ಮಾಡಿದ್ದಾರ ? ಹೂಹ್ಞು ಮಾಡೋದಿಲ್ಲ, ಯಾಕಂದ್ರೆ ಧರ್ಮಸ್ಥಳದ ಮಂಜುನಾಥ ಬೇರೆ ತಮ್ಮ ತಮ್ಮ ಮನೆಗಳಲ್ಲಿ ಇರುವ ದೇವರು ಬೇರೆ, ಟೀಕಿಸೋದಿಕ್ಕೆ ಮಂಜುನಾಥ ಬೇಕು, ಪೂಜಿಸೋದಿಕ್ಕೆ ಮನೆ ದೇವರು ಇರಬೇಕು ಅನ್ನೋದು ಇವರ ತರ್ಕ…
ಸೌಜನ್ಯ ಸಾವಿಗೆ ನ್ಯಾಯ ಸಿಗ್ಬೇಕು, ಈ ಪ್ರಕರಣದಲ್ಲಿ ಅಮಾಯಕನೊಬ್ಬನ ಬದುಕು ಹಾಳು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು, ಆತನ ಬದುಕಿಗೆ ಪರಿಹಾರ ಸಿಗ್ಬೇಕು, ಇನ್ನು ಊಹಾಪೋಹಗಳ ಪ್ರಕಾರ ಧರ್ಮಾಧಿಕಾರಿಗಳ ಸಂಬಂಧಿಕರೇ ಈ ಪ್ರಕರಣದಲ್ಲಿ ಭಾಗಿಯಾಗಿರೋದ್ ಸಾಬೀತಾದರೆ ಅವರಿಗೆ ಕಠಿಣ ಶಿಕ್ಷೆ ಆಗ್ಬೇಕು, ಹಾಗೆ ಇದೆಲ್ಲಾ ಗೊತ್ತಿದ್ರು ಧರ್ಮಾಧಿಕಾರಿಗಳು ಮೌನ ವಹಿಸಿದ್ರೆ ಅವರು ಆ ಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಮುಂದುವರೆಯಬಾರದು, ಇಷ್ಟು ಆಗ್ಬೇಕಾಗಿರೋದು, ಅದನ್ ಬಿಟ್ಟು ದೇವ್ರು ಇದನಾ ಇಲ್ವಾ ಅಂತ ಚರ್ಚೆ ಮಾಡ್ಕೊಂಡ್ ಕೂರೋದಲ್ಲ…
ಇನ್ನು ದೇಶದಲ್ಲಿ ಒಂಬತ್ತು ತಿಂಗಳ ಹಸುಗೂಸಿನಿಂದ ಹಿಡಿದು ಅರವತ್ತು ವರ್ಷದ ವೃದ್ಧೆಯ ಮೇಲೂ ಅತ್ಯಾಚಾರ ಆಗಿವೆ, ಅಲ್ಲಿಗೆ ದೇಶದಲ್ಲಿ ಎಲ್ಲೆಲ್ಲಿ ಅತ್ಯಾಚಾರ ಮತ್ತು ಕೊಲೆಗಳು ಆಗಿದಾವೊ ಅವುಗಳ ಸಮೀಪದಲ್ಲಿ ಒಂದಲ್ಲ ಒಂದು ಧಾರ್ಮಿಕ ಕ್ಷೇತ್ರವೊ ಅಥವಾ ದೇವಸ್ಥಾನವೊ ಇದ್ದೇ ಇರುತ್ತೆ, ಇವರ ತರ್ಕ ನೋಡಿದ್ರೆ ಇವರುಗಳು ಇನ್ಮೇಲೆ ಬರೀ ಧರ್ಮಸ್ಥಳ ಮಾತ್ರವಲ್ಲ ದೇಶದ ಯಾವುದೇ ದೇವಸ್ಥಾನಕ್ಕೂ ಹೋಗೋದಿಲ್ಲ ಅಂತ ಹೇಳ್ಬೇಕಾಗುತ್ತೆ, ಸೌಜನ್ಯ ಪ್ರಕರಣ ಧರ್ಮಸ್ಥಳ ಕ್ಷೇತ್ರದ ಬಳಿ ಆಯ್ತು ಅಂತ ಇಷ್ಟು ಹೋರಾಟ ಅನ್ನೋದಾದ್ರೆ ಬೇರೆ ಕಡೆ ಅತ್ಯಾಚಾರ ಆದವರ ಬಗ್ಗೆ ನ್ಯಾಯ ಕೇಳೋರ್ ಯಾರು? ಹಾಗಾದ್ರೆ ನ್ಯಾಯ ಸಿಗ್ಬೇಕು ಅಂದ್ರೆ ಅಪರಾಧಗಳು ಧಾರ್ಮಿಕ ಕ್ಷೇತ್ರಗಳ ಬಳಿಯೇ ಆಗಿರ್ಬೇಕ? ಬರೀ ಸೌಜನ್ಯ ಪ್ರಕರಣಕ್ಕೆ ನ್ಯಾಯ ಸಿಗ್ಬೇಕು ಅನ್ನೋದಾದ್ರೆ ಸೆಲೆಕ್ಟೀವ್ ಹೋರಾಟ ಅನ್ಸೋದಿಲ್ವ? ಈ ಥರ ವಿಚಾರದಲ್ಲಿ ಕಾನೂನುಗಳು ಬಿಗಿ ಆಗ್ಬೇಕು, ನಿರ್ಭಯಾ ಪ್ರಕರಣದಲ್ಲಿ ಶಿಕ್ಷೆ ಆದಂತೆ ಎಲ್ಲಾ ಅತ್ಯಾಚಾರದ ಪ್ರಕರಣಗಳಲ್ಲೂ ಆಗ್ಬೇಕು, ಬರೀ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟ ಅನ್ನೋದ್ ಸಾಬೀತಾದ್ರೂ ಕೂಡ ಜೀವನ ಪರ್ಯಂತ ಒದ್ದು ಒಳಗೆ ಹಾಕ್ಬೇಕು, ಆಗ್ಬೇಕಾಗಿರೊ ಬದಲಾವಣೆ ಇದು, ದೇವ್ರನ್ನ ನೋಡಲ್ಲ ಮಾತಾಡ್ಸಲ್ಲ ದರ್ಶನ ಮಾಡಲ್ಲ ಅಂತ ದೇವರ ಅಸ್ತಿತ್ವವನ್ನ ಪ್ರಶ್ನೆ ಮಾಡ್ಕೊಂಡ್ ಕೂರೋದಲ್ಲ…
ಆ ಒಂದು ಕ್ಷೇತ್ರವೇ ಲಕ್ಷಾಂತರ ಜನರಿಗೆ ಬದುಕು ಕಟ್ಟಿಕೊಟ್ಟಿದೆ, ಕೋಟ್ಯಾಂತರ ಹಸಿದ ಹೊಟ್ಟೆಗಳಿಗೆ ತೃಪ್ತಿಯಾಗುವಷ್ಟು ಊಟ ನೀಡಿದೆ, ಅನ್ಯಾಯದ ವಿರುದ್ಧ ಮಾತಾಡೋದು ತಪ್ಪಲ್ಲ, ಪ್ರಶ್ನೆ ಮಾಡೋದು ಕೂಡ ತಪ್ಪಲ್ಲ, ಆದ್ರೆ ಯಾವ ರೀತಿ ಪ್ರಶ್ನೆ ಮಾಡ್ತಿದಿವಿ ಅನ್ನೋದ್ ಕೂಡ ಮುಖ್ಯ ಆಗುತ್ತೆ, ಧರ್ಮಾಧಿಕಾರಿಗಳು ಇವತ್ತು ಇರ್ತಾರೆ ನಾಳೆ ಹೋಗ್ತಾರೆ, ಮುಂದೆ ಇನ್ಯಾರೊ ಆಡಳಿತ ಮಾಡ್ತಾರೆ, ಆದ್ರೆ ಅಲ್ಲಿರೊ ಮಂಜುನಾಥನಂತೂ ಶಾಶ್ವತ, ನಂಬಿಕೆ ಮತ್ತು ಭಕ್ತಿ ಇರುವವರು ದರ್ಶನ ಮಾಡ್ತಾರೆ, ಹೋರಾಟ ತಪ್ಪಿತಸ್ಥ ವ್ಯಕ್ತಿಗಳ ವಿರುದ್ಧ ಇರಬೇಕೆ ಹೊರತು ದೇವರ ವಿರುದ್ಧ ಅಲ್ಲ…
ಮನುಷ್ಯ ಮಾಡಿದ ತಪ್ಪಿಗೆ ದೇವರ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡೋದೇ ಮೂರ್ಖತನ, ಇಲ್ಲಿ ದೇವರನ್ನ ನಂಬಿ ಅಂತ ಯಾರೂ ಒತ್ತಾಯ ಮಾಡಿಲ್ಲ, ಶತಶತಮಾನಗಳಿಂದ ಧಾರ್ಮಿಕ ನಂಬಿಕೆ, ಶ್ರದ್ದೆ, ಭಕ್ತಿಯ ಮೇಲೆ ಧರ್ಮಸ್ಥಳ ಸೇರಿದಂತೆ ಅನೇಕ ಧಾರ್ಮಿಕ ಕ್ಷೇತ್ರಗಳು ನಿಂತಿವೆ, ಇನ್ನು ಅದೆಷ್ಟೋ ಶತಮಾನಗಳು ಇವು ಅದೇ ನಂಬಿಕೆಯಲ್ಲಿ ಇರುತ್ತವೆ, ಸಮುದ್ರದಲ್ಲಿ ಒಂದು ಬೊಗಸೆ ನೀರು ತೆಗೆದುಕೊಂಡು ತೀರಕ್ಕೆ ಚೆಲ್ಲಿದರೆ ಸಮುದ್ರದಲ್ಲಿ ನೀರು ಕಡಿಮೆ ಆಗುತ್ತಾ? ಹಾಗೆ ಬೆರಳೆಣಿಕೆಯಷ್ಟು ಜನ ಮಂಜುನಾಥ ಸ್ವಾಮಿಯ ದರ್ಶನ ಮಾಡೋದಿಲ್ಲ ಅಂದ ತಕ್ಷಣ ಭಕ್ತರ ಸಂಖ್ಯೆ ಏನ್ ಕಡಿಮೆ ಆಗೋದಿಲ್ಲ….