ದಾವಣಗೆರೆ: ಜಿಲ್ಲೆಯಲ್ಲಿ ತಡರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಅಡಿಕೆ, ತೆಂಗು ಮರಗಳು ನೆಲ ಕಚ್ಚಿವೆ. ಹತ್ತಾರು ಎಕರೆ ಅಡಿಕೆ, ತೆಂಗಿನ ತೋಟ, ಭತ್ತದ ಬೆಳೆಯಲ್ಲಿ ನೀರು ನಿಂತು ಹಾನಿಯಾಗಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಗಿರಿಯಾಪುರ , ಹರನಗಳ್ಳಿ, ಕೆಂಗಾಪುರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮಳೆ ಗಾಳಿ ಅಬ್ಬರ ಜೋರಾಗಿದೆ. ಜಿಎಸ್ ಶಿವಮೂರ್ತಪ್ಪ ಹಾಗೂ ಜಿಎಸ್ ಅಜ್ಜಪ್ಪ ಅವರಿಗೆ ಸೇರಿದ ತೋಟದಲ್ಲಿ ನೂರಕ್ಕೂ ಹೆಚ್ಚು ಅಡಿಕೆ ಮರಗಳು ನೆಲ ಕಚ್ಚಿವೆ. ಸ್ಥಳಕ್ಕೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡುವಂತೆ ರೈತರು ಆಗ್ರಹಿಸಿದ್ದು ಸೂಕ್ತ ಪರಿಹಾರ ನೀಡಲು ಮನವಿ ಮಾಡಿದ್ದಾರೆ.
ಚನ್ನಗಿರಿ ತಾಲೂಕಿನ ಕೆಂಗಾಪುರ ಬಳಿಯ ಹಳ್ಳಕ್ಕೆ ಭಾರಿ ಪ್ರಮಾಣದ ನೀರು ಹರಿದಿದೆ. ಹರನಗಳ್ಳಿ-ಕೆಂಗಾಪುರ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಹಳ್ಳಕ್ಕೊಂದು ಸೇತುವೆ ನಿರ್ಮಿಸುವಂತೆ ಹತ್ತಾರು ಸಲ ಗ್ರಾಮಸ್ಥರು ಹೋರಾಟ ಮಾಡಿದರೂ ಸ್ಥಳೀಯ ಶಾಸಕ ಪ್ರೊ. ಲಿಂಗಣ್ಣ ಹಾಗೂ ತಹಶೀಲ್ದಾರ್ ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.