ಸಿದ್ದಗಂಗಾ ಮಠಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ಎಂಟು ಕಡೆ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಶತಮಾನದ ಸಂತ ನಡೆದಾಡುವ ದೇವರು ಎಂದೇ ಭಕ್ತರ ಅಂತರಾಳದಲ್ಲಿ ನೆಲೆಸಿದ್ದ ತ್ರಿವಿಧದಾಸೋಹಿ ಡಾ ಶಿವಕುಮಾರಸ್ವಾಮಿಜೀ ಯವರ 115 ನೇ ಜನ್ಮದಿನೋತ್ಸವದಂದು ಕಲಿಯುಗದ ಪುಣ್ಯಪುರುಷರನ್ನು ನೆನೆಯೋಣ….
ಅನ್ನ, ಆಶ್ರಯ, ಅಕ್ಷರ ಎಂಬ ತ್ರಿವಿಧ ದಾಸೋಹದ ತಪಸ್ಸನ್ನಾಚರಿಸಿದ ಶತಮಾನದ ಸಂತ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು.
ತುಮಕೂರು: ನಡೆದಾಡುವ ದೇವರ 115 ನೇ ಜನ್ಮ ದಿನೋತ್ಸವದ ಹಿನ್ನೆಲೆ ತುಮಕೂರಿನಲ್ಲಿ ಹಬ್ಬದ ವಾತಾವರಣವಿದೆ. ಭಕ್ತಾದಿಗಳು ಶ್ರೀಗಳ ಹುಟ್ಟುಹಬ್ಬಕ್ಕಾಗಿ ಭಾರೀ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಇಂದು ಮುಂಜಾನೆಯೇ ಶ್ರೀಮಠದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಿದೆ.
ಶಿವಕುಮಾರ ಶ್ರೀಗಳ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳುತ್ತಿದ್ದಾರೆ. ಶಾ ಅವರು ಬೆಳಗ್ಗೆ 10-30ಕ್ಕೆ ತುಮಕೂರು ವಿವಿಯ ಹೆಲಿಪ್ಯಾಡಲ್ಲಿ ಇಳಿಯುತ್ತಾರೆ. ಬಳಿಕ ರಸ್ತೆ ಮಾರ್ಗದ ಮೂಲಕ ಸಿದ್ದಗಂಗಾ ಮಠಕ್ಕೆ ಆಗಮಿಸಿ, ಮೊದಲು ಶ್ರೀಗಳ ಗದ್ದಿಗೆ ದರ್ಶನ ಹಾಗೂ ಪೂಜೆ ಮಾಡುತ್ತಾರೆ. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವೇದಿಕೆ ಕಾರ್ಯಕ್ರಮ 11 ಗಂಟೆಯಿಂದ 1 ಗಂಟೆವರೆಗೂ ನಡೆಯುತ್ತದೆ.
ಕಾರ್ಯಕ್ರಮ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗಸ್ವಾಮೀಜಿ, ಸುತ್ತೂರು ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯುತ್ತದೆ. ವೇದಿಕೆ ಮೇಲೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಖೂಬಾ, ಸಂಸದ ಜಿ.ಎಸ್.ಬಸವರಾಜ್ ಹಾಗೂ ಸಾಧು ಸಂತರು ಸೇರಿದಂತೆ ಒಟ್ಟು 22 ಜನರಿಗೆ ಅವಕಾಶವಿದೆ. ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯಿಂದ ಹಳೇ ಮಠದ ಪೂಜಾಗ್ರಹದಲ್ಲಿ ಇಷ್ಟಲಿಂಗ ಪೂಜೆ ನಡೆಯಲಿದೆ. ಪರಿಚಾರಕರು ಹಾಗೂ ಶಿಷ್ಯವೃಂದದೊಂದಿಗೆ ಇಷ್ಠಲಿಂಗ ಪೂಜೆ ಮಾಡಲಾಗುತ್ತಿದೆ.
ಇಂದು ಸುಮಾರು 1.5 ರಿಂದ 2 ಲಕ್ಷ ಭಕ್ತಾಧಿಗಳು ಬರುವ ನಿರೀಕ್ಷೆ ಇದ್ದು, ಭಕ್ತಾದಿಗಳಿಗೆ ಎಂಟು ಕಡೆಗಳಲ್ಲಿ ಊಟ, ತಿಂಡಿಯ ವ್ಯವಸ್ಥೆ ಮಾಡಿಸಲಾಗಿದೆ. ಉಪ್ಪಿಟ್ಟು, ಕೇಸರಿಬಾತ್, ಬೋಂದಿ ಪಾಯಸ, ಅನ್ನಸಾಂಬಾರ್, ವಿವಿಧ ಖಾದ್ಯಗಳನ್ನು ಮಠದಲ್ಲಿ ತಯಾರು ಮಾಡಲಾಗಿದೆ.