ಬೆಂಗಳೂರು: ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮುಂಬರುವ ಚುನಾವಣೆ ಹತ್ತಿರ ಆಗುತ್ತಿದಂತೆ ಒಗ್ಗಟ್ಟಿನ ಪ್ರದರ್ಶನಕ್ಕೆ ದೇವರ ಮೊರೆ ಹೋಗಿದ್ದಾರೆ. ಶಾಸಕರ ಜೊತೆ ಆರಾಧ್ಯ ದೈವದ ದರ್ಶನ ಪಡೆಯಲು ಹೆಚ್ಡಿಕೆ ತಯಾರಿ ನಡೆಸಿದ್ದಾರೆ. ಶೀಘ್ರದಲ್ಲೇ ಮೂವತ್ತು ಶಾಸಕರ ಜೊತೆ ತಿಮ್ಮಪ್ಪನ ದರ್ಶನ ಪಡೆಯಲು ತಿರುಪತಿಗೆ ತೆರಳಲಿದ್ದಾರೆ. ಈ ಮೂಲಕ ಮತ್ತೆ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

ಈಗಾಗಲೆ ಶಾಸಕರು ಹಲವು ಭಾರಿ ಕುಮಾರಸ್ವಾಮಿ ಮೇಲೆ ಸಣ್ಣಪುಟ್ಟ ಅಸಮಾಧಾನ ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೆ ಜಿಟಿ ದೇವೆಗೌಡ, ಎಟಿ ರಾಮಸ್ವಾಮಿ, ಶಿವಲಿಂಗೆಗೌಡ ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಚುನಾವಣಾ ವರ್ಷದಲ್ಲಿ ಹಾಲಿ ಶಾಸಕರು ಪಕ್ಷ ತೊರೆದರೆ ಕಾರ್ಯಕರ್ತರಿಗೆ ಬೇರೆ ಸಂದೇಶ ಹೋಗಿ ಇದರಿಂದ ಪಕ್ಷಕ್ಕೆ ಮತ್ತಷ್ಟು ಹೊಡೆತ ಬೀಳುತ್ತದೆ.
ಹೀಗಾಗಿ ತಿಮ್ಮಪ್ಪನ ದರ್ಶನದ ಮೂಲಕ ಶಾಸಕರ ಅಸಮಾಧಾನ ಶಮನ ಮಾಡಲು ಕುಮಾರಸ್ವಾಮಿ ದೇವರ ಮೊರೆ ಹೋಗಲಿದ್ದಾರೆ. ಅದಕ್ಕೆ ಎಲ್ಲಾ ಶಾಸಕರನ್ನು ದೇವರ ದರ್ಶನದ ಮೂಲಕ ವಿಶ್ವಾಸಕ್ಕೆ ತೆಗೆದುಕೊಳ್ಳುಲು ಹೆಚ್ಡಿಕೆ ತೀರ್ಮಾನಿಸಿದ್ದಾರೆ. ಎಲ್ಲಾ ಶಾಸಕರು ಒಟ್ಟಾದರೆ ಪಕ್ಕಕ್ಕೆ ಮತ್ತಷ್ಟು ಬಲ ಬರಲಿದೆ. ಈ ಮೂಲಕ ತಿಮ್ಮಪ್ಪನ ಸನ್ನಿಧಿಯಿಂದ ಒಗ್ಗಟ್ಟಿನ ಸಂದೇಶ ಕೊಡಲು ಕುಮಾರಸ್ವಾಮಿ ಪ್ಲಾನ್ ಮಾಡಿಕೊಂಡಿದ್ದಾರೆ. ಕಳೆದ ಕೋರ್ ಕಮಿಟಿಯಲ್ಲಿ ಈ ನಿರ್ಧಾರಕ್ಕೆ ದಳಪತಿಗಳು ಬಂದಿದ್ದಾರೆ.
