ಮುಂಬೈ: ನೆರೆಮನೆಯ ಸಾಕು ಗಿಳಿ ನಿರಂತರವಾಗಿ ಕಿರುಚಾಡುತ್ತದೆ. ಇದರಿಂದ ನನಗೆ ಬಹಳ ಕಿರಿಕಿರಿಯಾಗುತ್ತಿದೆ. ದಯವಿಟ್ಟು ಈ ಸಮಸ್ಯೆಯನ್ನು ಬಗೆಹರಿಸಿ ಎಂದು ವೃದ್ಧರೊಬ್ಬರು ಪೊಲೀಸರ ಮೊರೆ ಹೋಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
72 ವರ್ಷದ ವೃದ್ಧ ಸುರೇಶ್ ಶಿಂಧೆ, ತಮ್ಮ ನೆರೆಮನೆಯ ಅಕ್ಬರ್ ಅಮ್ಜದ್ ಖಾನ್ ಅವರು ಸಾಕಿರುವ ಗಿಳಿಯಿಂದ ತಮಗೆ ಬಹಳ ತೊಂದರೆಯಾಗುತ್ತಿದೆ. ಅದು ಯಾವಾಗಲೂ ಕಿರುಚಾಡುತ್ತಿರುತ್ತದೆ. ಹೀಗಾಗಿ ಅಮ್ಜದ್ ಖಾನ್ ವಿರುದ್ಧ ದೂರು ದಾಖಲಿಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಸುರೇಶ್ ಶಿಂಧೆ ಆಗಸ್ಟ್ 5 ರಂದು ದೂರು ನೀಡಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಅವರ ದೂರಿನ ಅನ್ವಯ ಗಿಳಿಯ ಮಾಲೀಕರ ವಿರುದ್ಧ ಶಾಂತಿ ಭಂಗ ಹಾಗೂ ಕ್ರಿಮಿನಲ್ ಬೆದರಿಕೆಗಳನ್ನು ಗುರುತಿಸಲಾದ ಅಪರಾಧಗಳ ಅಡಿ ದೂರನ್ನು ದಾಖಲಿಸಿಕೊಂಡಿದ್ದೇವೆ. ನಿಯಮಗಳ ಪ್ರಕಾರ ನಾವು ಮುಂದುವರಿಯುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.