ವಿಜಯ್ ಕಿರಗಂದೂರು ತವರಿಗೆ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದ ಕೆಜಿಎಫ್ ಟೀಂ

ಮಂಡ್ಯ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರ ಇಂದು ಮಧ್ಯರಾತ್ರಿ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಚಿತ್ರ ರಿಲೀಸ್‍ಗೂ ಮುನ್ನ ನಿರ್ಮಾಪಕ ವಿಜಯ್ ಕಿರಗಂದೂರು ತವರಿಗೆ ಕೆಜಿಎಫ್ ಟೀಂ ಭೇಟಿ ನೀಡಿ ಹಿರಿಯರ ಆಶೀರ್ವಾದ ಪಡೆದುಕೊಂಡಿದೆ.

ಹೊಂಬಾಳೆ ತವರು ಮಂಡ್ಯದ ಕಿರಗಂದೂರಿಗೆ ಮಂಗಳವಾರ ರಾತ್ರಿ ಚಿತ್ರತಂಡ ಭೇಟಿ ಕೊಟ್ಟಿದೆ. ಈ ವೇಳೆ ಟೀಂ ಹಿರಿಯರ ಆಶೀರ್ವಾದ ಪಡೆದುಕೊಂಡಿದೆ. ರಾಕಿಂಗ್ ಸ್ಟಾರ್ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ ಕಿರಗಂದೂರು ತವರಿನಲ್ಲಿ ಪೂಜೆ ಸಲ್ಲಿಸಿ ಚಿತ್ರದ ಯಶಸ್ಸಿಗೆ ಕೋರಿದರು.

ಶ್ರೀರಂಗಪಟ್ಟಣದ ನಿಮಿಷಾಂಬ ದೇವಾಲಯಕ್ಕೆ ಚಿತ್ರತಂಡ ತೆರಳಿ ಪೂಜೆ ಸಲ್ಲಿಸಿದೆ. ಹಿರಿಯರ ಮನೆಯಲ್ಲಿ ಕುಟುಂಬದವರೊಂದಿಗೆ ಬೆರೆತು ಕೆಲ ಹೊತ್ತು ಕಳೆದಿದೆ. ಅಲ್ಲದೆ ಹೊಂಬಾಳೆಗೆ ಸ್ಫೂರ್ತಿಯಾಗಿದ್ದ ಹಿರಿಯರು ಪೂರ್ವಜರ ಆಶೀರ್ವಾದವನ್ನು ಕೆಜಿಎಫ್ ಟೀಂ ಪಡೆದುಕೊಂಡಿದೆ. ಈ ವೇಳೆ ವಿಜಯ ಕಿರಗಂದೂರು ಅವರ ಹಿರಿಯ ಸಹೋದರ ಕಿರಗಂದೂರು ಮಂಜುನಾಥ್ ಚಿತ್ರತಂಡಕ್ಕೆ ಶುಭ ಕೋರಿದರು.

ಇತ್ತೀಚೆಗಷ್ಟೇ ನಟ ಯಶ್ ಹಾಗೂ ವಿಜಯ್ ಕಿರಗಂದೂರು ಅವರು ಚಿತ್ರದ ಯಶಸ್ಸಿಗೆ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದುಕೊಂಡಿದ್ದರು. ಅಲ್ಲದೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜೊತೆ ಮಾತುಕತೆ ನಡೆಸಿ, ಚಿತ್ರದ ಬಗ್ಗೆ ಮಾಹಿತಿ ನೀಡಿದ್ದರು. ಹಾಗೂ ಖಾವಂದರ ಆಶೀರ್ವಾದ ಪಡೆದುಕೊಂಡು ಬಂದಿದ್ದರು.

Leave a Reply

Your email address will not be published. Required fields are marked *