ಟಿಪ್ಪು ಸುಲ್ತಾನ್ (Tippu Sultan) ಅವರ ಜೀವನಾಧಾರಿತ ಸಿನಿಮಾ ಮಾಡುವ ಬಗ್ಗೆ ಬಾಲಿವುಡ್ ನಿರ್ಮಾಪಕ ಸಂದೀಪ್ ಸಿಂಗ್ (Sandeep Singh) ಅವರು ಅನೌನ್ಸ್ ಮಾಡಿದ್ದರು. ಈಗ ಟಿಪ್ಪು ಕಥೆ ಹೇಳೋದಕ್ಕೆ ಅವರು ಹಿಂದೆ ಸರಿದಿದ್ದಾರೆ. ತಮಗೆ ಮತ್ತು ತಮ್ಮ ಕುಟುಂಬಕ್ಕೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸಂದೀಪ್ ಸಿಂಗ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಸಿನಿಮಾ ಅರ್ಧಕ್ಕೆ ಕೈ ಬಿಟ್ಟಿರುವ ಬಗ್ಗೆ ನಿರ್ಮಾಪಕ ಸೋಶಿಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಬಾಲಿವುಡ್ನಲ್ಲಿ(Bollywood) ಬಯೋಪಿಕ್ಗಳ ಹಾವಳಿ ಜೋರಾಗಿದೆ. ಸಂಜು, ಎಂ.ಎಸ್ ಧೋನಿ, ಗಾಂಧಿ, ತಲೈವಿ ಹೀಗೆ ಸಾಕಷ್ಟು ಸಿನಿಮಾಗಳು ಜೀವನ ಆಧರಿಸಿದ ಸಿನಿಮಾಗಳು ಬಂದಿದೆ. ಅದರಂತೆಯೇ ಟಿಪ್ಪು ಸುಲ್ತಾನ್ ಸಿನಿಮಾ ಮಾಡುವ ಬಗ್ಗೆ ಅನೌನ್ಸ್ ಮಾಡಿದ್ದರು. ಇದರ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಸಿನಿಮಾವನ್ನು ನಿರ್ಮಾಪಕ ಕೈಬಿಟ್ಟಿದ್ದಾರೆ. ಯಾವುದೇ ಧರ್ಮದವರ ಭಾವನೆಗೆ ನೋವು ಉಂಟುಮಾಡುವ ಉದ್ದೇಶ ತಮಗೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ನನಗೆ, ನನ್ನ ಕುಟುಂಬದವರಿಗೆ, ನನ್ನ ಸ್ನೇಹಿತರಿಗೆ ಬೆದರಿಕೆ ಹಾಕುವುದನ್ನು ಮತ್ತು ನಿಂದಿಸುವುದನ್ನು ನಿಲ್ಲಿಸಿ ಎಂದು ನನ್ನ ಸಹೋದರ, ಸಹೋದರಿಯರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಯಾರದ್ದಾದರೂ ಧಾರ್ಮಿಕ ಭಾವನೆಗೆ ನಾನು ಧಕ್ಕೆ ತಂದಿದ್ದರೆ ಕ್ಷಮೆ ಕೇಳುತ್ತೇನೆ. ಆ ಉದ್ದೇಶ ನನಗೆ ಇಲ್ಲ. ಎಲ್ಲರ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ಭಾರತೀಯರಾದ ನಾವು ಒಂದಾಗಿ ಇರೋಣ ಮತ್ತು ಪರಸ್ಪರ ಗೌರವ ನೀಡೋಣ ಎಂದು ಸಂದೀಪ್ ಸಿಂಗ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಟಿಪ್ಪು ಸುಲ್ತಾನ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಬೇಕು ಎಂಬುದು ನಿರ್ಮಾಪಕರ ಪ್ಲ್ಯಾನ್ ಆಗಿತ್ತು. ಬಹುಭಾಷೆಗಳಲ್ಲಿ ಸಿನಿಮಾ ಬರುವ ಬಗ್ಗೆ ನಿರೀಕ್ಷೆಯಿತ್ತು. ಈ ಮೇ 4ರಂದು ಈ ಎಲ್ಲ ಭಾಷೆಗಳಲ್ಲಿ ಟಿಪ್ಪು ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಆಗಲೇ ಈ ಸಿನಿಮಾದ ಬಗ್ಗೆ ವಿರೋಧ ಕೇಳಿಬಂದಿತ್ತು.