ದಾವಣಗೆರೆ ವಿವಿ 09ನೇ ವಾರ್ಷಿಕ ಘಟಿಕೋತ್ಸವ :ದೇಶದ ಏಕತೆ, ಅಖಂಡತೆಗಾಗಿ ಧರ್ಮ, ಸಂಸ್ಕøತಿಗಳು ಸದೃಢವಾಗಬೇಕು – ಥಾವರ್ ಚಂದ್ ಗೆಹ್ಲೋಟ್

ದಾವಣಗೆರೆ :

ವಿಶ್ವಶಾಂತಿಗಾಗಿ ಇಡೀ ಜಗತ್ತೇ ಭಾರತ ದೇಶದಿಂದ ಹೆಚ್ಚಿನದನ್ನು ಅಪೇಕ್ಷಿಸುತ್ತಿದ್ದು, ದೇಶದ ಏಕತೆ, ಅಖಂಡತೆಗಾಗಿ ನಮ್ಮಲ್ಲಿನ ಧರ್ಮ, ಸಂಸ್ಕøತಿಗಳು ಸದೃಢವಾಗಬೇಕು, ಈ ದಿಸೆಯಲ್ಲಿ ಯುವ ಪೀಳಿಗೆ ಮಹತ್ವದ ಪಾತ್ರ ವಹಿಸಬೇಕು ಎಂದು ರಾಜ್ಯದ ಘನತೆವೆತ್ತ ರಾಜ್ಯಪಾಲರು ಹಾಗೂ ದಾವಣಗೆರೆ ವಿವಿ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಆವರಣದಲ್ಲಿ ಗುರುವಾರ ಏರ್ಪಡಿಸಲಾದ 09 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಸುದೈವ ಕುಟುಂಬಕಂ’, ‘ಸರ್ವೇ ಜನ ಸುಖಿನೋಭವಂತು’ ಎನ್ನುವಂತಹ ಆಲೋಚನೆಗಳೇ ನಮ್ಮ ದೇಶದ ಸಂಸ್ಕøತಿಯಾಗಿದೆ. ವಿಶ್ವ ಶಾಂತಿಗಾಗಿ ಇಡೀ ಜಗತ್ತು ಭಾರತದಿಂದ ಹೆಚ್ಚಿನದನ್ನು ಅಪೇಕ್ಷಿತ್ತಿದೆ. ಜಗತ್ತಿನ ಅಪೇಕ್ಷೆ ಪೂರೈಸಲು ನಾವೆಲ್ಲರು ಸಹಭಾಗಿಗಳಾಗಲು ಪ್ರಯತ್ನ ಮಾಡಬೇಕು. ಭಾರತ ವಿಶ್ವಗುರು ಆಗುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕಿದೆ. ಪ್ರಸ್ತುತ ದೇಶದ ಜನಸಂಖ್ಯೆಯಲ್ಲಿ ಯುವಜನತೆ ಹೆಚ್ಚಿದ್ದಾರೆ, ಹೀಗಾಗಿ ಇಪ್ಪತ್ತೊಂದನೇ ಶತಮಾನ ಭಾರತ ದೇಶದ್ದು ಎಂದು ಹೇಳಲಾಗುತ್ತದೆ. ಯುವಶಕ್ತಿಯಿಂದ ಭಾರತ ದೇಶಕ್ಕೆ ಹೆಚ್ಚಿನ ನಿರೀಕ್ಷೆಯಿದೆ. ಅನೇಕ ಸವಾಲುಗಳು ನಮ್ಮ ಮುಂದಿವೆ. ಸಮಸ್ಯೆ, ಸವಾಲುಗಳ ನಿವಾರಣೆಗೆ ಯುವ ಜನತೆ ದೇಶದೊಂದಿಗೆ ಕೈಜೋಡಿಸಬೇಕು. ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮದು, ನಮ್ಮ ಸಂವಿಧಾನ ದೇಶದ 130 ಕೋಟಿ ಜನರಿಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಆದರೆ ಕೇವಲ ಕುಟುಂಬ, ಸಮುದಾಯ, ಊರು ಬಗ್ಗೆ ಯೋಚನೆ ಮಾಡುವುದು ಸರಿಯಲ್ಲ. ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳ ಬಗ್ಗೆಯೂ ಕಾಳಜಿ ಬೇಕು. ದೇಶ, ಸಮಾಜದ ಬಗ್ಗೆಯೂ ಕರ್ತವ್ಯ ಪರಿಪಾಲನೆ ಆಗಬೇಕು. ಹೆಚ್ಚಿನ ಜನಸಂಖ್ಯೆಯಿಂದ ಪರಿಸರ ಹಾಳಾಗುತ್ತಿದೆ. ಭವಿಷ್ಯದಲ್ಲಿ ಇದು ದೊಡ್ಡ ಸವಾಲನ್ನು ಸೃಷ್ಟಿ ಮಾಡಲಿದೆ. ಜಲಸಂರಕ್ಷಣೆ, ಪರಿಸರ ರಕ್ಷಣೆ, ದೇಶದ ಜನಹಿತಕ್ಕಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳ ಸಮರ್ಪಕ ಅನುಷ್ಠಾನದಲ್ಲಿಯೂ ಜನರ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂದರು.

ಘಟಿಕೋತ್ಸವವು ವಿದ್ಯಾರ್ಥಿಗಳು, ಪೋಷಕರು, ಗುರುಗಳ ಪಾಲಿಗೆ ಅತ್ಯಂತ ಮಹತ್ವದ್ದು ಹಾಗೂ ಭಾವನಾತ್ಮಕವಾದ ಸಮಾರಂಭವಾಗಿದೆ. ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪಡೆದವರಿಂದ ಭವಿಷ್ಯದಲ್ಲಿ ದೇಶಕ್ಕೆ ಹಾಗೂ ಸಮಾಜಕ್ಕೆ ಇನ್ನಷ್ಟು ಸೇವೆ ದೊರೆಯಲಿ ಎಂದರು. ಬಂಗಾರದ ಪದಕಗಳು, ಪದವಿ ಪಡೆದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೆ ಪ್ರಸ್ತುತ ಅಧ್ಯಯನ ನಿರತ ವಿದ್ಯಾರ್ಥಿಗಳೂ ಕೂಡ, ಬಂಗಾರದ ಪದಕ ಪಡೆದಂತಹ ವಿದ್ಯಾರ್ಥಿಗಳಿಂದ ಪ್ರೇರಣೆ ಪಡೆಯಬೇಕು. ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಏಕಾಗ್ರತೆಯಿಂದ ಅಧ್ಯಯನ ಮಾಡಿದಲ್ಲಿ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ರಾಜ್ಯಪಾಲರು ಆಶಯ ವ್ಯಕ್ತಪಡಿಸಿದರು.

ಘಟಿಕೋತ್ಸವ ಭಾಷಣ ಮಾಡಿದ ಓರಿಸ್ಸಾ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಾಜಿ ಕುಲಾಧಿಪತಿ ಡಾ. ಪಿ.ವಿ. ಕೃಷ್ಣಭಟ್ ಅವರು, ಭಾರತದಲ್ಲಿ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೆ ಸಾವಿರಾರು ವರ್ಷಗಳ ದೀರ್ಘ ಇತಿಹಾಸವಿದೆ. ನಲಂದಾ, ತಕ್ಷಶಿಲಾ, ವಿಕ್ರಮಶಿಲಾ ಮುಂತಾದ ವಿವಿಗಳು ವಿಶ್ವಾದ್ಯಂತ ವಿದ್ಯಾರ್ಥಿಗಳು, ವಿದ್ವಾಂಸರನ್ನು ಆಕರ್ಷಿಸಿದ್ದವು. ಬಖ್ತಿಯಾಲ್ ಖಿಲ್ಜಿ ನಲಂದಾ ವಿವಿ ಮೆಲೆ ದಾಳಿ ಮಾಡಿ ಅಲ್ಲಿನ ಪುಸ್ತಕ ಭಂಡಾರಕ್ಕೆ ಬೆಂಕಿ ಹಚ್ಚಿದಾಗ, ಆ ಬೆಂಕಿ 6 ತಿಂಗಳ ಕಾಲ ಉರಿಯುತ್ತಿತ್ತೆಂದು ವರ್ಣಿಸಲಾಗಿದೆ. ಹೀಗೆ ನಮ್ಮಲ್ಲಿದ್ದ ಅಪಾರ ಜ್ಞಾನಭಂಡಾ ಮತ್ತು ವಿವಿ ಗಳು ಪರಕೀಯ ಆಕ್ರಮಣದಿಂದ ಉಧ್ವಸ್ಥಗೊಂಡವು. ಸ್ವಾತಂತ್ರ್ಯಾನಂತರ ದೇಶದಲ್ಲಿ ರಾಷ್ಟ್ರೀಯ ಸ್ಫೂರ್ತಿ, ಚಿಂತನೆಯನ್ನು ಉತ್ತೇಜಿಸುವ, ರಾಷ್ಟ್ರೀಯ ಉದ್ದೇಶಗಳಿಗೆ ಪೂರಕವಾದ ಶಿಕ್ಷಣ ವ್ಯವಸ್ಥೆ ರೂಪಿಸುವಲ್ಲಿ ಯಶಸ್ಸು ಕಂಡಿಲ್ಲ. ದೆಹಲಿಯ ಜೆ.ಎನ್.ಯು ವಿವಿಯಂತಹ ಪ್ರತಿಷ್ಠಿತ ವಿವಿಗಳ ವಿದ್ಯಾರ್ಥಿಗಳು ‘ಭಾರತ್ ತೇರೆ ಟುಕಡೇ ಹೋಂಗೆ’ ಎಂಬ ಘೋಷಣೆ ಹಾಕುವ ಮಟ್ಟಕ್ಕೆ ತಲುಪಿರುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಘೋರ ದುರಂತವಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿಜ್ಞಾನ, ತಂತ್ರಜ್ಞಾನಕ್ಕೆ ವಿಶೇಷ ಪ್ರಾಮುಖ್ಯತೆ ಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ನಮ್ಮ ದೇಶದ ಪ್ರತಿಭಾವಂತರು, ವಿಜ್ಞಾನಿಗಳು, ತಂತ್ರಜ್ಞರು, ಸಂಶೋಧಕರು ತಾವು ವಿಶ್ವದಲ್ಲಿ ಯಾರಿಗೂ ಕಡಿಮೆ ಇಲ್ಲ, ಮುಂದುವರಿದ ದೇಶಗಳನ್ನು ಮಿರಿಸುವ ಸಾಧನೆ ಮಾಡಬಲ್ಲ ಸಾಮಥ್ರ್ಯ ಹೊಂದಿದವರು ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಜಗತ್ತಿನ ಹಲವು ರಾಷ್ಟ್ರಗಳು ವಿಜ್ಞಾನ, ತಂತ್ರಜ್ಞಾನದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದ್ದರೂ, ಆ ಪ್ರಗತಿ ಮನುಕುಲಕ್ಕೆ ಕಲ್ಯಾಣಕಾರಿಯಾಗುವ ಬದಲಿಗೆ ಹಾನಿಕಾರಕವಾಗುವ ಸಂಭವವನ್ನೇ ಸೂಚಿಸುತ್ತಿದೆ. ಕೋವಿಡ್ ಸೂಕ್ಷ್ಮಾಣುಗಳನ್ನು ಚೀನಾ ದೇಶದ ಪ್ರಯೋಗ ಶಾಲೆಯಲ್ಲಿ ನಿರ್ಮಾಣ ಮಾಡಲಾಯಿತೆಂಬ ಸಂಗತಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇತ್ತೀಚಿನ ಯುಕ್ರೇನ್ ಮೇಲಿನ ರಷ್ಯಾ ದಾಳಿ ಮತ್ತು ಅದರಿಂದಾಗಿರುವ ಅಪಾರ ಸಾವು ನೋವುಗಳು ಸಂಭವನೀಯ ದುರಂತದ ಮುನ್ಸೂಚನೆಯಾಗಿದೆ. ಸದ್ಯದ ಜಾಗತಿಕ ಸನ್ನಿವೇಶದಲ್ಲಿ ಜಗತ್ತು ಸಿಡಿಮದ್ದುಗಳ ರಾಶಿಯ ಮೇಲೆಯೇ ಕುಳಿತಿದೆಯೇನೋ ಎನ್ನುವ ಚಿತ್ರ ಕಣ್ಣಿಗೆ ಕಟ್ಟುತ್ತಿದೆ. ವಿಜ್ಞಾನ, ತಂತ್ರಜ್ಞಾನಗಳು ವಿನಾಶಕರವಾಗದಿರಬೇಕಾದರೆ ಸಮಗ್ರ ಜಗತ್ತಿನ ಹಿತವನ್ನು ಸಾಧಿಸುವ ಮನೋಭಾವ, ಜೀವನ ದೃಷ್ಟಿ ಬೆಳೆಸುವಂತಾಗಬೇಕು. ವಿಶ್ವಾದ್ಯಂತ ಗಂಭೀರವಾದ ಸಾಮಾಜಿಕ ತುಮುಲವನ್ನು ನಾವು ವೀಕ್ಷಿಸುತ್ತಿದ್ದೇವೆ. ಹಿಂಸೆ, ಕ್ರೌರ್ಯ, ಶಸ್ತ್ರಸಂಗ್ರಹ, ಯುದ್ಧಭೀತಿಯ ಸನ್ನಿವೇಶಗಳು ವಿಕರಾಳರೂಪವನ್ನು ತಳೆಯುತ್ತಿವೆ. ಭಾರತದ ಶಾಂತಿ ಸಮನ್ವಯತೆಯ ಸಂದೇಶಕ್ಕಾಗಿ ವಿಶ್ವ ಕಾತರಿಸುತ್ತಿರುವಂತೆ ಕಾಣುತ್ತಿದೆ ಎಂದರು.

ಭಾರತೀಯ ಪರಂಪರೆಯಲ್ಲಿ ಎಲ್ಲಾ ಜೀವನಮೌಲ್ಯಗಳ ಸಮುಚ್ಛಯವನ್ನೇ ಧರ್ಮ ಎಂದು ಕರೆಯಲಾಗಿದೆ. ಧರ್ಮ ಶಬ್ದದ ಅರ್ಥವ್ಯಾಪ್ತಿಯನ್ನು ಸರಿಯಾಗಿ ತಿಳಿಯದೆ ಅದನ್ನು ರಿಲೀಜನ್ ಶಬ್ದಕ್ಕೆ ಪರ್ಯಾಯವಾಗಿ ಪರಿಗಣಿಸಿರುವುದು ಬಹಳಷ್ಟು ಅನರ್ಥಗಳಿಗೆ ಕಾರಣವಾಗಿದೆ. ಕ್ರೈಸ್ತಮತದ ಸರ್ವಶ್ರೇಷ್ಠತೆಯನ್ನು ಸಾರುವ ಉದ್ದೇಶದಿಂದಲೇ 19ನೇ ಶತಮಾನದ ಅಂತ್ಯಭಾಗದಲ್ಲಿ ಆಯೋಜಿಸಲಾಗಿದ್ದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕನಂದರು ಹಿಂದೂ ಧರ್ಮದ ವೈಶ್ವಿಕ ಚಿಂತನೆ, ವೈಜ್ಞಾನಿಕ ದೃಷ್ಟಿಕೋನವನ್ನು ಅಸಂಧಿಗ್ದವಾಗಿ ಪ್ರತಿಪಾದಿಸಿ ವಿಶ್ವದ ಚಿಂತನಶೀಲ ಸಮೂಹದ ಗಮನ ಆಕರ್ಷಿಸುವಲ್ಲಿ ಯಶಸ್ವಿಯಾದರು, ಪರಿಣಾಮವಾಗಿ ಸಮ್ಮೇಳನದ ಆಯೋಜಕರ ಉದ್ದೇಶ ವಿಫಲಗೊಳ್ಳುವಂತಾಯಿತು ಎಂದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಸ್ವಾಗತ ಭಾಷಣ ಮಾಡಿ, ಘಟಿಕೋತ್ಸವದಲ್ಲಿ 06 ಪಿಹೆಚ್‍ಡಿ, 04 ಎಂ.ಫಿಲ್, ಪದವಿ, 9724 ಸ್ನಾತಕ ಮತ್ತು 1612 ಸ್ನಾತಕೋತ್ತರ ಪದವಿಧರರಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ. ಒಟ್ಟು 44 ವಿದ್ಯಾರ್ಥಿಗಳು 79 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಸರ್ಕಾರದ ನಿರ್ದೇಶನದಂತೆ ವಿವಿ ಯಲ್ಲೂ ಮಾಹಿತಿ ಸಂವಹನ ತಂತ್ರಜ್ಞಾನದಡಿ ಕೆಲಸಗಳ ನಿರ್ವಹಣೆಯಾಗುತ್ತಿದ್ದು, ಆಡಳಿತದಲ್ಲಿ ಪಾರದರ್ಶಕತೆ ಮತ್ತು ಸ್ವಚ್ಛ ಆಡಳಿತ ತರುವುದೇ ಇದರ ಉದ್ದೇಶವಾಗಿದೆ. ಈ ಘಟಕಕ್ಕಾಗಿಯೇ ಪ್ರತ್ಯೇಕ ಕಚೇರಿ ಸ್ಥಾಪಿಸಲಾಗಿದ್ದು, ವಿವಿಯಲ್ಲಿ ಮಾಹಿತಿ ತಂತ್ರಜ್ಞಾನ ಕೆಲಸಗಳನ್ನು ಜಾರಿಗೊಳಿಸಿರುವುದನ್ನು ಪ್ರಶಂಸಿಸಿ, ರಾಷ್ಟ್ರ ಮಟ್ಟದ ಪ್ರಶಸ್ತಿ ಬಂದಿರುವುದು ಸಂತೋಷದ ಸಂಗತಿ. ರಾಷ್ಟ್ರೀಯ ಉಚ್ಛತರ ಶಿಕ್ಷಣ ಅಭಿಯಾನದಡಿ ಕೇಂದ್ರ ಸರ್ಕಾರದಿಂದ ವಿವಿಗೆ 20 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದರು.

ಗೌರವ ಡಾಕ್ಟರೇಟ್ ಪ್ರದಾನ : ಆಯರ್ವೇದ ಮತ್ತು ಯೋಗ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಶಶಿಕುಮಾರ್ ವಿ.ಎಂ, ನಿವೃತ್ತ ಪ್ರಾಧ್ಯಾಪಕರು, ಜನಪದ ತಜ್ಞರಾದ ಡಾ. ಮೀರಾ ಸಾಬಿಹಳ್ಳಿ ಶಿವಣ್ಣ ಮತ್ತು ಇತಿಹಾಸಕಾರರಾದ ಲಕ್ಷ್ಮಣ ಎಸ್ ತೆಲಗಾವಿ ಅವರಿಗೆ ಘಟಿಕೋತ್ಸವದಲ್ಲಿ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪುರಸ್ಕಾರ ಪ್ರದಾನ ಮಾಡಿದರು.

ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಪ್ರೊ. ಎಸ್.ವಿ. ಹಲಸೆ, ಕುಲಸಚಿವರು (ಪರೀಕ್ಷಾಂಗ) ಪ್ರೊ. ಅನಿತಾ ಹೆಚ್.ಎಸ್., ಕುಲಸಚಿವರು (ಆಡಳಿತ) ಪ್ರೊ. ಗಾಯತ್ರಿ ದೇವರಾಜ್, ವಿಶ್ವವಿದ್ಯಾನಿಲಯದ ವಿವಿಧ ನಿಕಾಯಗಳ ಮುಖ್ಯಸ್ಥರು, ಸಿಂಡಿಕೇಟ್ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *