ಕಾರ್ಯಕರ್ತರ ಆಕ್ರೋಶದ ಬಿಸಿ – ಜನೋತ್ಸವ ಕಾರ್ಯಕ್ರಮದ ಸಿಎಂ ಬೊಮ್ಮಾಯಿ ಘೋಷಣೆ

ಬಿಜೆಪಿ ಕಾರ್ಯಕರ್ತ ಪ್ರವೀಣ ಹತ್ಯೆ ಹಿನ್ನೆಲೆ ಕಾರ್ಯಕರ್ತರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ರಾಜ್ಯ ಬಿಜೆಪಿ ಸರ್ಕಾರದ ಮೂರು ವರ್ಷಗಳ ಸಾಧನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಜನಸಮಾವೇಶವನ್ನು ರದ್ದುಗೊಳಿಸಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದ ಗದ್ದುಗೆ ಏರಿ ಮೂರು ವರ್ಷಗಳು ತುಂಬಿರುವ ನಡುವಲ್ಲೇ ಬಿಜೆಪಿ ಕಾರ್ಯಕರ್ತ ಪ್ರವೀಣ್ ಅವರ ಹತ್ಯೆ (Praveen Murder) ಸರ್ಕಾರಕ್ಕೆ ಆಘಾತ ನೀಡಿತ್ತು. ಅಲ್ಲದೆ, ಸರ್ಕಾರದ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದ ರಾಜ್ಯ ಬಿಜೆಪಿ ಸರ್ಕಾರ, ಇಂದು ಆಯೋಜಿಸಿದ್ದ ಜನೋತ್ಸವ ಕಾರ್ಯಕ್ರಮವನ್ನು ಕೂಡ ರದ್ದುಗೊಳಿಸಿದೆ. ಈ ಬಗ್ಗೆ ಮಧ್ಯರಾತ್ರಿ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರವೀಣ್ ಅವರ ಹತ್ಯೆ ಸಂದರ್ಭದಲ್ಲಿ ಕಾರ್ಯಕ್ರಮ ಸೂಕ್ತವಲ್ಲ. ಹೀಗಾಗಿ ದೊಡ್ಡಬಳ್ಳಾಪುರದಲ್ಲಿ ಹಾಗೂ ವಿಧಾನಸೌಧದಲ್ಲಿ‌ ಹಮ್ಮಿಕೊಳ್ಳಲಾಗಿದ್ದ ಜನೋತ್ಸವ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದರು.

ಹತ್ಯೆ ನಡುವೆ ಕಾರ್ಯಕ್ರಮ ನಡೆಸಿದರೆ ಕಾರ್ಯಕರ್ತರ ಕೆಂಗಣ್ಣಿಗೆ ಮತ್ತಷ್ಟು ಗುರಿಯಾಗಬೇಕಾಗುತ್ತದೆ ಎಂಬ ಭಯ ರಾಜ್ಯ ಬಿಜೆಪಿ ನಾಯಕರಲ್ಲಿ ಹುಟ್ಟಿಕೊಂಡಿದೆ. ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಗಲಾಟೆ ಗದ್ದಲವೆಬ್ಬಿಸುವ ಆತಂಕವಿತ್ತು. ಇದೇ ಕಾರಣಕ್ಕೆ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳಿಂದ ತಿಳಿದುಬಂದಿದೆ.

ಪ್ರವೀಣನ ಹತ್ಯೆ ಸುದ್ದಿ ಬಂದ ಮೇಲೆ ಸಾಕಷ್ಟು ನೋವು, ಕಳವಳ ನನ್ನೊಳಗೆ ಆಗಿತ್ತು. ಪೊಲೀಸರಿಗೆ ಕೊಡಬೇಕಾದ ಎಲ್ಲಾ ಸೂಚನೆಗಳನ್ನ ಕೊಟ್ಟಿದ್ದೇನೆ. ಅಮಾಯಕ ಯುವಕನನ್ನ ಯೋಜನಾಬದ್ಧವಾಗಿ ಹತ್ಯೆಗೈದಿದ್ದು ಖಂಡನೀಯ, ಮಾತಿನಲ್ಲಿ ಖಂಡನೆಗಿಂದ ನಮ್ಮ ಮನಸ್ಸಿನಲ್ಲಿ‌ ಖಂಡನೆಯಿದೆ. ನಾಳೆ ಸರ್ಕಾರಕ್ಕೆ ಒಂದು ವರ್ಷ ಹಾಗೂ ಯಡಿಯೂರಪ್ಪನವರ ಸರ್ಕಾರಕ್ಕೆ ಎರಡು ವರ್ಷ ಆಗಲಿದ್ದು, ಒಟ್ಟು ಮೂರು ವರ್ಷಗಳ ಸಾಧನೆ ಜನರಿಗೆ ತೋರಿಸುವ ನಿಟ್ಟಿನಲ್ಲ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಡೀ ದಿನ ಅದೇ ಕಾರ್ಯಕ್ರಮದಲ್ಲಿದ್ದೆ ಎಂದರು.

ಪ್ರವೀಣನ ಹತ್ಯೆಯಾದ ಹಾಗೂ ಕಾರ್ಯಕರ್ತನ ತಾಯಿ ನೋವಿನಲ್ಲಿದ್ದಾಗ ಕಾರ್ಯಕ್ರಮ ನಡೆಸುವುದು ಸೂಕ್ತವಲ್ಲ. ಹೀಗಾಗಿ ದೊಡ್ಡಬಳ್ಳಾಪುರದಲ್ಲಿ ಹಾಗೂ ವಿಧಾನಸೌಧದಲ್ಲಿ‌ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಕಾರ್ಯಕ್ರಮಕ್ಕೆ ಬರುವವರಿದ್ದ, ಉತ್ಸುಕರಾಗಿದ್ದ ಕಾರ್ಯಕರ್ತರಲ್ಲಿ ಕ್ಷಮೆಯಾಚಿಸುತ್ತೇನೆ. ಆದರೆ ಜನರಿಗಾಗಿ ಉದ್ದೇಶಿಸಲಾಗಿದ್ದ ಯೋಜನೆಗಳನ್ನ ನಾನು ಪ್ರಕಟಿಸಲಿದ್ದೇನೆ ಎಂದರು.

Leave a Reply

Your email address will not be published. Required fields are marked *