ಎಬಿವಿಪಿ ವಿದ್ಯಾರ್ಥಿಗಳ‌ ಮೇಲೆ ನಡೆದ ದಾಳಿಯನ್ನು ಖಂಡಿಸಿ ವಿವಿ ಸುತ್ತಲೂ ಭಗವಾ ಧ್ವಜ ಹಾರಿಸಿದ ಹಿಂದೂ ಸಂಘಟನೆ

ನವದೆಹಲಿ: ರಾಮನವಮಿಯಂದು ಮಾಂಸಾಹಾರ ವಿಚಾರವಾಗಿ ಎರಡು ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ನಡೆದ ಮಾರಮಾರಿ ಬಳಿಕ ಈಗ ಜೆ‌ಎನ್‌ಯು ಕ್ಯಾಂಪಸ್‌ನಲ್ಲಿ ಮತ್ತೊಂದು ವಿವಾದ ಭುಗಿಲೆದ್ದಿದೆ. ಗಲಭೆ ವೇಳೆ ಎಬಿವಿಪಿ ವಿದ್ಯಾರ್ಥಿಗಳ‌ ಮೇಲೆ ನಡೆದ ದಾಳಿಯನ್ನು ಖಂಡಿಸಿ ವಿವಿ ಸುತ್ತಲೂ ಭಗವಾ ಧ್ವಜ ಹಾರಿಸಲಾಗಿದೆ.

ಇಂದು ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಜೆಎನ್‌ಯು ಕ್ಯಾಂಪಸ್ ಸುತ್ತಲೂ ಕೇಸರಿ ಶಾಲ್‌ಗಳನ್ನು ಕಟ್ಟಿ, ಭಗವಾ ಧ್ವಜ ಹಾರಿಸಿ, ಭಗವಾ ಜೆಎನ್‌ಯು ಎಂದು ಫ್ಲೇಕ್ಸ್‌ಗಳನ್ನು ಹಾರಿಸಲಾಗಿತ್ತು. ಹಿಂದೂ ಸೇನೆ ನೇತೃತ್ವದಲ್ಲಿ ಈ ಕಾರ್ಯ ನಡೆದಿದ್ದು, ಬಲಪಂಥಿಯ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವುದು ಉದ್ದೇಶ ಎಂದು ಸಂಘಟನೆ ಹೇಳಿಕೊಂಡಿದೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ದೆಹಲಿ ಪೊಲೀಸರು ಕಟ್ಟಿದ ಕೇಸರಿ ಶಾಲ್‌ಗಳನ್ನು, ಫ್ಲೇಕ್ಸ್‌ಗಳನ್ನು ತೆರವುಗೊಳಿಸಿದರು ಮತ್ತು ಭಗವಾ ಧ್ವಜಗಳನ್ನು ಕೆಳಗಿಳಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಲಾಯಿತು. ಹಿಂದೂ ಸೇನೆ ಕಾರ್ಯಕ್ಕೆ ವಿಶ್ವವಿದ್ಯಾಲಯದಲ್ಲಿರುವ ಎಡಪಂಥೀಯ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿಂದೂ ಸೇನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತಾ, ಜೆಎನ್‌ಯು ಕ್ಯಾಂಪಸ್‌ನಲ್ಲಿ ಕೇಸರಿ ಮತ್ತು ಹಿಂದುತ್ವವನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ. ಇದು ದುರದೃಷ್ಟಕರ ಮತ್ತು ತಪ್ಪು ನಿರ್ಧಾರವಾಗಿದೆ. ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳು ಕೇಸರಿ ಬಣ್ಣವನ್ನು ಏಕೆ ದ್ವೇಷಿಸುತ್ತಾರೆ? ಕೇಸರಿ ನಮ್ಮ ಸಂಸ್ಕೃತಿ, ಇದು ಜೆಎನ್‌ಯು ಮಾತ್ರವಲ್ಲದೆ ಇಡೀ ದೇಶದಲ್ಲಿ ನಮ್ಮ ಸಂಸ್ಕೃತಿಯ ಸಂಕೇತವಾಗಿದೆ. ಹಿಂದುತ್ವ ನಮ್ಮ ಸಂಸ್ಕೃತಿ. ಹಿಂದೂ ನಮ್ಮ ಸಂಸ್ಕೃತಿ, ಅದನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಪೊಲೀಸರ ಕ್ರಮಕ್ಕೆ ಪ್ರತಿಕ್ರಿಯಿಸಿದ ಗುಪ್ತಾ, ಧ್ವಜಗಳನ್ನು ತೆಗೆದುಹಾಕುವ ಮೂಲಕ ಪೊಲೀಸರು ಸಂವಿಧಾನವನ್ನು ಅಗೌರವಿಸಿದ್ದಾರೆ. ಪೊಲೀಸರು ಕೇಸರಿ ಧ್ವಜಗಳನ್ನು ಕಿತ್ತೊಗೆಯಲು ಆತುರಪಡಬಾರದು. ಪೊಲೀಸರು ಆತುರ ತೋರಲು ಕೇಸರಿ ಭಯೋತ್ಪಾದನೆಯ ಸಂಕೇತವಲ್ಲ. ಕೇಸರಿ ಮತ್ತು ಹಿಂದುತ್ವವನ್ನು ರಕ್ಷಿಸುವುದು ಕಾನೂನಿನ ಹಕ್ಕು ಎಂದರು.

Leave a Reply

Your email address will not be published. Required fields are marked *