ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರ ಐದನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮಕ್ಕೆ ಚಾಮರಾಜನಗರ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಆಯ್ಕೆಯಾಗಿದ್ದು, ಪಿಎಂ ಮೋದಿ ಅವರ ಜೊತೆ ಮಾತನಾಡಲಿದ್ದಾಳೆ. ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ಏ.1ರಂದು ನಡೆಸಲಿರುವ ಪರೀಕ್ಷಾ ಪೇ ಚರ್ಚೆಯಲ್ಲಿ ಚಾಮರಾಜನಗರ ವಿದ್ಯಾರ್ಥಿನಿ ಶ್ರೇಯಾ ಭಾಗಿಯಾಗಲಿದ್ದು, ವರ್ಚುಯಲ್ ಮೂಲಕವೇ ‘ತರಗತಿಯಲ್ಲಿ ಡಿಜಿಟಲ್ ಸಂವಾದ’ ಎಂಬ ವಿಷಯದ ಬಗ್ಗೆ ಪ್ರಧಾನಿ ಅವರೊಟ್ಟಿಗೆ ಮಾತನಾಡಲಿದ್ದಾಳೆ.
ಈ ಬಾರಿಯ ‘ಪರೀಕ್ಷಾ ಪೇ ಚರ್ಚಾ’ ಸಂವಾದ ನವ ದೆಹಲಿಯ ತಾಳ್ಕಟೋರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನೂ ಸಂವಾದಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವುದಕ್ಕೂ ಮೊದಲು ಸೃಜನಶೀಲ ಬರವಣಿಗೆ ಸ್ಪರ್ಧೆ ನಡೆಸಲಾಗುತ್ತದೆ. ಆ ಬಳಿಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಇದೇ ಮೊದಲ ಬಾರಿಗೆ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ಈ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾಳೆ. ಪರೀಕ್ಷೆ ಬಗ್ಗೆ ಮಕ್ಕಳಲ್ಲಿರುವ ಭಯ, ಒತ್ತಡ ಹೋಗಲಾಡಿಸುವ ಉದ್ದೇಶದಿಂದ ಹಾಗೂ ಅವರಲ್ಲಿ ಧೈರ್ಯ ತುಂಬುವುದಕ್ಕಾಗಿ ಪ್ರಧಾನಿ ಐದು ವರ್ಷದಿಂದ ಈ ಸಂವಾದ ಕಾರ್ಯ ನಡೆಸುತ್ತಿದ್ದಾರೆ.