ದಾವಣಗೆರೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮಾರ್ಚ್ 18 ಹಾಗೂ 19ರಂದು ದಾವಣಗೆರೆಯ ಹದಡಿ ರಸ್ತೆಯಲ್ಲಿನ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣಮಂದಿರದಲ್ಲಿ ರಾಜ್ಯಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 12ಕ್ಕೆ ಸಮಾವೇಶ ನಡೆಯಲಿದೆ. ಇದಕ್ಕೂ ಮುನ್ನ ಬೆಳಗ್ಗೆ 10.30ಕ್ಕೆ ನಗರದ ಅಂಬೇಡ್ಕರ್ ಸರ್ಕಲ್ನಿಂದ ಮೆರವಣಿಗೆ ನಡೆಯಲಿದೆ. ನಂತರ ನಡೆಯುವ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಮೈಸೂರಿನ ಉರಿಲಿಂಗ ಪೆದ್ದಿಮಠದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ ಹಾಗೂ ಆದಿಜಾಂಭವಮಠದ ಶ್ರೀ ಷಡಕ್ಷರಿಮುನಿ ದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಪ್ರಗತಿಪರ ಚಿಂತಕ ಬರಗೂರು ರಾಮಚಂದ್ರಪ್ಪ ಸಮಾವೇಶ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಂ.ಗುರುಮೂರ್ತಿ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಮುಂಡರಗಿ ನಾಗರಾಜ, ಹೂಡಿ ಮಂಜುನಾಥ ಆಗಮಿಸಲಿದ್ದಾರೆ ಎಂದರು.
ಮಧ್ಯಾಹ್ನ 3 ರಿಂದ ವಿಚಾರ ಗೋಷ್ಠಿಗಳು ಜರುಗಲಿವೆ. ಚರಿತ್ರೆಯ ಕಣ್ಣಲ್ಲಿ ದಲಿತರು ಕುರಿತು ಬೆಂಗಳೂರು ನ್ಯಾಷನಲ್ ಕಾಲೇಜಿನ ವಿ.ಎಲ್ ನರಸಿಂಹಮೂರ್ತಿ ಮಾತನಾಡಲಿದ್ದಾರೆ. ಸಂಜೆ 4ಕ್ಕೆ ನಡೆಯುವ ಗೋಷ್ಠಿಯಲ್ಲಿ ಪ್ರೊ.ಕೃಷ್ಣಪ್ಪ ಮತ್ತು ದಲಿತ ಚಳವಳಿ ಹೋರಾಟದ ದಾರಿ ಮತ್ತು ಗುರಿ ಕುರಿತು ಕೋಲಾರದ ಪ್ರಗತಿಪರ ಚಿಂತಕ ಕೋಟಗಾನಹಳ್ಳಿ ರಾಮಯ್ಯ ವಿಷಯ ಮಂಡನೆ ಮಾಡಲಿದ್ದಾರೆ ಎಂದರು.
ಮಾ.19 ರಂದು ಬೆಳಗ್ಗೆ 9.30ಕ್ಕೆ ದಲಿತ ಮಹಿಳೆಯರ ಸಂಕಟಗಳು ಮತ್ತು ಸಂವೇದನೆ ಕುರಿತು ದಾವಣಗೆರೆಯ ಶಿಕ್ಷಕಿ ಎಸ್.ಸಿ.ಪುಷ್ಪಾಂಜಲಿ ಮಾತನಾಡಲಿದ್ದಾರೆ. ಬೆಳಗ್ಗೆ 10.30ಕ್ಕೆ ದಲಿತರು ಮತ್ತು ಭಾರತ ಸಂವಿಧಾನ ವರ್ತಮಾನದ ಸವಾಲುಗಳು ಮತ್ತು ಸಾಧ್ಯತೆಗಳ ಬಗ್ಗೆ ಸಾಗರದ ಪ್ರೊ.ಬಿ.ಎಲ್.ರಾಜು ವಿಚಾರ ಮಂಡಿಸಲಿದ್ದಾರೆ. ನಂತರ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಡಾ.ಸಿ.ಜಿ.ಲಕ್ಷ್ಮೀಪತಿ, ದಲಿತರು ಮತ್ತು ಸಾಂಸ್ಕೃತಿಕ ರಾಜಕಾರಣ ದಾರಿ ಮತ್ತು ಗುರಿ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿಸಿದರು.
19ರಂದು ಮಧ್ಯಾಹ್ನ 3 ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕವಿ ಸುಬ್ಬು ಹೊಲೆಯಾರ್ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಿಎಸ್ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್, ಹತ್ತಿಗೋಳ ಕರಿಯಪ್ಪ, ವಿಜಯಕುಮಾರಿ, ಪಿ.ಜೆ ಮಹಾಂತೇಶ್, ಅಣಜಿ ಹನುಮಂತಪ್ಪ, ಬೇತೂರು ಹನುಮಂತಪ್ಪ, ನಿಂಗರಾಜ್ ಇತರರು ಇದ್ದರು.