ಬೆಂಗಳೂರು/ಚಿತ್ರದುರ್ಗ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ರಾಜಕೀಯ ಚರ್ಚೆಗಳ ನಡುವೆ ಕಾಂಗ್ರೆಸ್ ಸಚಿವ ಸಂಪುಟ ಪುನರ್ರಚನೆ ಕುತೂಹಲ ಮೂಡಿಸಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕಾಗಿ ಇದೀಗ ತೀವ್ರ ಪೈಪೋಟಿ ಆರಂಭವಾಗಿದೆ. ಹೊಸ ಸಚಿವ ಸಂಪುಟದಲ್ಲಿ ಜಿಲ್ಲೆಯ ಪ್ರತಿನಿಧಿತ್ವ ಯಾರಿಗೆ ಸಿಗಲಿದೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ಜೋರಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಸ ಪವರ್ ಸೆಂಟರ್ ಆಗಿ ಹೊರಹೊಮ್ಮಿರುವ B. G. Govindappa ಹಾಗೂ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ T. Raghumurthy ನಡುವೆ ಸಚಿವ ಸ್ಥಾನಕ್ಕಾಗಿ ಭಾರೀ ಸ್ಪರ್ಧೆ ನಡೆಯುತ್ತಿದೆ ಎನ್ನಲಾಗುತ್ತಿದೆ.

ಹೊಸದುರ್ಗ ಕ್ಷೇತ್ರದಿಂದ ಗೆದ್ದಿರುವ ಬಿ.ಜಿ. ಗೋವಿಂದಪ್ಪ ಅವರಿಗೆ ಹಿರಿಯ ನಾಯಕತ್ವದ ಸಂಪರ್ಕ, ಸಂಘಟನೆ ಮೇಲೆ ಹಿಡಿತ ಹಾಗೂ ಪ್ರಾದೇಶಿಕ ಸಮೀಕರಣಗಳು ಪ್ಲಸ್ ಪಾಯಿಂಟ್ ಆಗಿವೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಚಳ್ಳಕೆರೆ ಕ್ಷೇತ್ರದ ರಘುಮೂರ್ತಿ ಸತತ ಮೂರು ಬಾರಿ ಗೆಲುವು ಸಾಧಿಸಿರುವ ಅನುಭವ, ಎಸ್ಟಿ ಸಮುದಾಯದ ಪ್ರಭಾವ ಹಾಗೂ ಪಕ್ಷದ ನಿಷ್ಠಾವಂತ ನಾಯಕ ಎಂಬ ಇಮೇಜ್ನಿಂದ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.
ಮಾಜಿ ಸಚಿವ ಡಿ. ಸುಧಾಕರ್ ನಿಧನದ ಬಳಿಕ ಚಿತ್ರದುರ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಒಳರಾಜಕೀಯ ಸಮೀಕರಣಗಳು ಬದಲಾಗಿದ್ದು, ಈ ಬಾರಿ ಜಿಲ್ಲೆಗೆ ಹೊಸ ಮುಖಕ್ಕೆ ಸಚಿವ ಸ್ಥಾನ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಜಿಲ್ಲೆಯಲ್ಲಿ ಸಮುದಾಯ ಹಾಗೂ ಪ್ರಾದೇಶಿಕ ಲೆಕ್ಕಾಚಾರಗಳು ಕೂಡ ಹೈಕಮಾಂಡ್ಗೆ ಮಹತ್ವದ ಅಂಶವಾಗಿವೆ.
ಇದೇ ವೇಳೆ ರಾಜ್ಯ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ತಂಡ ರಚನೆ ಸಾಧ್ಯತೆಗಳ ನಡುವೆಯೇ ಹಲವು ಜಿಲ್ಲೆಗಳಂತೆ ಚಿತ್ರದುರ್ಗದಲ್ಲೂ ಸಚಿವ ಸ್ಥಾನಕ್ಕಾಗಿ ಲಾಬಿ ಜೋರಾಗಿದೆ.
